ಕಿತ್ತನಕೆರೆಯಲ್ಲಿ ಶ್ರೀಕರಿಯಮ್ಮ ದೇವಿ–ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ವೈಭವ ಮಹಾರಥೋತ್ಸವದಲ್ಲಿ ಸಾವಿರಾರು ಭಕ್ತರ ಭಕ್ತಿ ಸಂಭ್ರಮ
ಮಾಡಾಳು ಅರಸೀಕೆರೆ ತಾಲೂಕಿನ ಕಣಕಟ್ಹೋಬಳಿ ಕಿತ್ತನಕೆರೆ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ಹಾಗೂ ಶ್ರೀ ಆಂಜನೇಯಸ್ವಾಮಿ ಅವರ ಜಾತ್ರಾ ಮಹೋತ್ಸವವು ಭಕ್ತಿ, ಸಂಭ್ರಮ ಮತ್ತು ವೈಭವದ ನಡುವೆ ಅದ್ದೂರಿಯಾಗಿ ನೆರವೇರಿತು.
ಮೇ 2ರಿಂದ ಆರಂಭವಾದ ಜಾತ್ರಾ ಮಹೋತ್ಸವದಲ್ಲಿ ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ಚೌಡೇಶ್ವರಿ ದೇವಿ ದೇವಾಲಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪ್ರತಿದಿನವೂ ವಿವಿಧ ಧಾರ್ಮಿಕ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದೇವಾಲಯವನ್ನು ತಳಿರು ತೋರಣಗಳು, ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.
ಜಾತ್ರಾ ಅಂಗವಾಗಿ ಶ್ರೀ ಆಂಜನೇಯಸ್ವಾಮಿಗೆ 101ಡೆ ಸೇವೆ, ಶ್ರೀ ಕರಿಯಮ್ಮ ದೇವಿಗೆ ಮಧುವಣಿಗೆ ಶಾಸ್ತ್ರ, ಮುತ್ತಿನ ವಾಹನೋತ್ಸವ, ಧ್ವಜಾರೋಹಣ, ಬಾನದ ಕಾರ್ಯಕ್ರಮ, ಬೇವಿನ ಸೀರೆ ಉತ್ಸವ, ಆನೆ ಉತ್ಸವ, ಸಿರಿ ಕಾರ್ಯಕ್ರಮ ಹಾಗೂ ಬೆಳ್ಳಿ ರಥೋತ್ಸವ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಲಾಯಿತು.
ಶುಕ್ರವಾರ ಮಧ್ಯಾಹ್ನ 12.35ಕ್ಕೆ ನಡೆದ ಮಹಾರಥೋತ್ಸವವು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ಬಾಣವಾರ, ಕಿತ್ತನಕೆರೆ ಸೇರಿದಂತೆ ಸುತ್ತಮುತ್ತಲಿನ 12 ಹಳ್ಳಿಗಳ ಗ್ರಾಮಸ್ಥರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿಭಾವದಿಂದ ರಥವನ್ನು ಎಳೆಯುವ ಮೂಲಕ ತಮ್ಮ ಹರಕೆ ಸಮರ್ಪಿಸಿದರು. “ಜೈ ಕರಿಯಮ್ಮ” ಹಾಗೂ “ಜೈ ಆಂಜನೇಯ” ಎಂಬ ಘೋಷಣೆಗಳು ಮೊಳಗುತ್ತಿದ್ದು, ಇಡೀ ಗ್ರಾಮ ಭಕ್ತಿ ಸಾಗರದಲ್ಲಿ ತೇಲಿದಂತಾಯಿತು.
ಮಹಾರಥೋತ್ಸವದ ಬಳಿಕ ಭಕ್ತಾದಿಗಳಿಗೆ ಮಹಾದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ಸಂಜೆ ನಡೆದ ಉಯ್ಯಾಲೋತ್ಸವ ಭಕ್ತರ ಅದ್ದೂರಿ ಮಣೆವು ಗಮನ ಸೆಳೆಯಿತು.
Home ರಾಜ್ಯ ಕಿತ್ತನಕೆರೆಯಲ್ಲಿ ಶ್ರೀಕರಿಯಮ್ಮ ದೇವಿ–ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ವೈಭವ ಮಹಾರಥೋತ್ಸವದಲ್ಲಿ ಸಾವಿರಾರು ಭಕ್ತರ ಭಕ್ತಿ ಸಂಭ್ರಮ






