ಸಾರ್ವಜನಿಕರು ಸ್ವಯಂ ಗಣತಿಯಲ್ಲಿ ಭಾಗಿಯಾಗಲು ಜಿಲ್ಲಾಧಿಕಾರಿ ಮನವಿ
ಹಾಸನ 2027ರ ಜನಗಣತಿ ಹಿನ್ನಲೆಯಲ್ಲಿ ಏಪ್ರೀಲ್ 1 ರಿಂದ ಸ್ವಯಂ ಮನೆಗಣತಿ ಆರಂಭವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರು ಸ್ವಯಂ ಗಣತಿಯಲ್ಲಿ ಭಾಗಿಯಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಸಂಭಾಗಣದಲ್ಲಿ ಇಂದು ಗಣತಿಯ ಸಿದ್ದತೆ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು ದೇಶದ ಅಭಿವೃದ್ಧಿಯ ಹಾದಿಯನ್ನು ನಿರ್ಧರಿಸುವ ಮಹತ್ವದ ಕಾರ್ಯವಾಗಿದ್ದು, ಪ್ರತಿಯೊಬ್ಬ ನಾಗರಿಕರೂ ಇದರ ಭಾಗವಾಗುವುದು ಅವರ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ನಮ್ಮ ಜನಗಣತಿ, ನಮ್ಮ ಅಭಿವೃದ್ಧಿ, ನನ್ನ ಗಣತಿ ದೇಶದ ಶಕ್ತಿ ಜನರು ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದರು.
ಚುನಾವಣೆಗಳಲ್ಲಿ ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು ಅದೇ ರೀತಿ ಮನೆಗಣತಿ ಹಾಗೂ ಜನಗಣತಿಯ ವೇಳೆಯಲ್ಲಿ ಸಂಪೂರ್ಣ ಹಾಗೂ ನಿಖರ ಮಾಹಿತಿಯನ್ನು ನೀಡುವ ಮೂಲಕ ಸಹಕಾರ ನೀಡುವಂತೆ ಜಿಲ್ಲೆಯ ಜನರಿಗೆ ಮನವಿ ಮಾಡಿದರು.
ಜನಗಣತಿ ಕಾರ್ಯದಿಂದ ಜನಸಂಖ್ಯೆ, ಜನರ ಜೀವನಮಟ್ಟ, ವಾಸ ಸ್ಥಿತಿ, ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಪ್ರಮುಖ ಅಂಶಗಳ ಬಗ್ಗೆ ನಿಖರ ಮಾಹಿತಿ ಒದಗಿಸುವುದಿಂದ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದರು ಹೇಳಿದರು.
2027ರ ಜನಗಣತಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಮತ್ತು ಆಧುನಿಕ ವ್ಯವಸ್ಥೆಗಳೊಂದಿಗೆ ಎರಡು ಹಂತಗಳಲ್ಲಿ ನಡೆಯಲಿದೆ. ಏ.16 ರಿಂದ ಮೇ 15 ರ ವರೆಗೆ ಮನೆಪಟ್ಟಿ ಮತ್ತು ಮನೆಗಣತಿ ನಡೆಯಲಿದೆ. ಜಿಲ್ಲಾಡಳಿತದ ವತಿಯಿಂದ ಅಗತ್ಯ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
2ನೇ ಹಂತದಲ್ಲಿ ಜನಸಂಖ್ಯಾ ಗಣತಿ ನಡೆಯಲಿದ್ದು ಮನೆಗಣತಿಯಲ್ಲಿ ಒಟ್ಟು 34 ಪ್ರಶ್ನೆಗಳಿದ್ದು ಸ್ವಯಂ ಗಣತಿ 10-15 ನಿಮಿಷದಲ್ಲಿ ಮುಗಿಯಲಿದೆ. ಇದನ್ನು 2027ರ ಗಣತಿ ಕಾರ್ಯದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ಇದು ಮನೆ ಪಟ್ಟಿ ಕಾರ್ಯಾಚರಣೆಗಳ ವಿವರಗಳನ್ನು ಸ್ಪಷ್ಟವಾಗಿ ದಾಖಲು ಮಾಡಲಾಗುತ್ತದೆ ಎಂದು ವಿವರಿಸಿದರು.
ಈ ಬಾರಿಯ ಜನಗಣತಿಯ ವೈಶಿಷ್ಟ್ಯವೆಂದರೆ ಸ್ವಯಂ-ಗಣತಿ ವ್ಯವಸ್ಥೆಯಿಂದ ಜನರು ತಮ್ಮ ಮನೆಯ ಮಾಹಿತಿಯನ್ನು ಸ್ವತಃ ಆನ್ಲೈನ್ ಮೂಲಕ ನಮೂದಿಸಬಹುದು. ಸಾರ್ವಜನಿಕರು ನಿಗದಿತ ವೆಬ್ ಸೈಟ್ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ಮತ್ತು ಓಟಿಪಿ ಬಳಸಿ ಲಾಗಿನ್ ಆಗಿ, ಮನೆಯ ಸ್ಥಳವನ್ನು ಡಿಜಿಟಲ್ ಮ್ಯಾಪ್ನಲ್ಲಿ ಗುರುತಿಸಿ, ಕುಟುಂಬದ ಸಂಪೂರ್ಣ ಮಾಹಿತಿ ಭರ್ತಿ ಮಾಡಬಹುದು. ಮಾಹಿತಿ ಸಲ್ಲಿಸಿದ ನಂತರ ಅವರಿಗೆ ಎಸ್ಇ ಐಡಿ ಬರುತ್ತದೆ ಎಂದರು.
ಗಣತಿದಾರರು ಮನೆಗೆ ಆಗಮಿಸಿದ ವೇಳೆಯಲ್ಲಿ ಎಸ್ಇ ಐಡಿಯನ್ನು ಗಣತಿದಾರರಿಗೆ ನೀಡುವ ಮೂಲಕ ಮಾಹಿತಿ ದೃಢೀಕರಣ ಮಾಡಬಹುದು ಹಾಗೂ ಸಮಯ ಉಳಿತಾಯವಾಗುವುದರ ಜೊತೆಗೆÀ ಗಣತಿ ಕಾರ್ಯಕ್ಕೆ ಸಹಕಾರಿಯಾಗಿಲಿದೆ ಎಂದರು.
ಮೊಬೈಲ್ ಅಪ್ಲಿಕೇಶನ್ ಡಿಜಿಟಲ್ ವ್ಯವಸ್ಥೆಯಿಂದ ಮಾಹಿತಿ ಸಂಗ್ರಹಣೆ ವೇಗವಾಗಿ ನಡೆಯುವುದರ ಜೊತೆಗೆ ತಪ್ಪುಗಳ ಸಾಧ್ಯತೆ ಕಡಿಮೆಯಾಗುತ್ತದೆ. ಡೇಟಾ ಸುರಕ್ಷತೆ ಮತ್ತು ಗೌಪ್ಯತೆಗೂ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದ ಅವರು ಸರಳ ಮತ್ತು ಸುರಕ್ಷಿತವಾಗಿದೆ ಎಂದು ತಿಳಿಸಿದರು.
ಜನಗಣತಿಯಲ್ಲಿ ನೀಡುವ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿರಿಸಲಾಗುತ್ತದೆ. ಈ ಮಾಹಿತಿ ಕೇವಲ ಸರ್ಕಾರದ ಯೋಜನೆಗಳ ರೂಪಿಕರಣಕ್ಕೆ ಮಾತ್ರ ಬಳಸಲಾಗುತ್ತದೆ ಮತ್ತು ಯಾವುದೇ ವ್ಯಕ್ತಿಗತ ಉದ್ದೇಶಗಳಿಗೆ ಬಳಸುವುದಿಲ್ಲ ಎಂದು ತಿಳಿಸಿದರು.
ಜನಗಣತಿ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳಿಗೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಮಾಸ್ಟರ್ ಟ್ರೈನರ್ಗಳಿಗೆ ತರಬೇತಿ ನೀಡಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಫೀಲ್ಡ್ ಟ್ರೈನರ್ಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ವಿಶೇಷ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯಾವುದೇ ಕಾರಣದಿಂದ ಸ್ವಯಂ-ಗಣತಿ ಮಾಡಲು ಸಾಧ್ಯವಾಗದಿದ್ದರೂ ನಿಗದಿತ ಅವಧಿಯಲ್ಲಿ ಗಣತಿದಾರರು ಮನೆಗೆ ಭೇಟಿ ನೀಡಿ, ಎಲ್ಲಾ ಮಾಹಿತಿ ಸಂಗ್ರಹಿಸುತ್ತಾರೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಜಗದೀಶ್ ವಿ. ಗಂಗಣ್ಣನವರ್ ಉಪಸ್ಥಿರಿದ್ದರು.







