ಅರಸೀಕೆರೆಯಲ್ಲಿ ಎಟಿಎಂ ದರೋಡೆ ಯತ್ನ ವಿಫಲ: ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಇಬ್ಬರು ಆರೋಪಿಗಳ ಸೆರೆ
ಅರಸೀಕೆರೆ: ಪಟ್ಟಣದ ವಾಚನಾಲಯ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಹಣ ಕಳ್ಳತನ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ನಡೆದಿದೆ.
ಆರೋಪಿಗಳಾದ ಅವೇಜ್ಖಾನ್ ಹಾಗೂ ಸುಹೀಲ್, ಎಟಿಎಂ ಯಂತ್ರದ ಭದ್ರತಾ ವ್ಯವಸ್ಥೆಯನ್ನು ಹಾನಿಗೊಳಿಸಿ ಹಣ ಕಳವು ಮಾಡಲು ಯತ್ನಿಸಿದ್ದರು. ಯಂತ್ರದ ನಿಯಂತ್ರಣ ಘಟಕಕ್ಕೆ ಹಾನಿ ಉಂಟುಮಾಡುವುದರ ಜೊತೆಗೆ ಸಿಸಿ ಕ್ಯಾಮೆರಾವನ್ನೂ ಧ್ವಂಸಗೊಳಿಸಿ ಕೃತ್ಯ ಎಸಗಲು ಮುಂದಾಗಿದ್ದರು ಎನ್ನಲಾಗಿದೆ.
ಎಟಿಎಂ ನಿರ್ವಹಣೆ ಹಾಗೂ ಹಣ ತುಂಬುವ ಜವಾಬ್ದಾರಿ ಹೊಂದಿರುವ ಎನ್ಸಿಆರ್ ಕಾರ್ಪೊರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಹೈದರಾಬಾದ್ ನಿಯಂತ್ರಣ ಕೇಂದ್ರಕ್ಕೆ ಎಚ್ಚರಿಕೆ ಸಂದೇಶ ರವಾನೆಯಾಗಿತ್ತು. ಕೂಡಲೇ ಕಂಪನಿಯ ಪ್ರತಿನಿಧಿಗಳು ಅರಸೀಕೆರೆ ನಗರ ಪೊಲೀಸರಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಎಟಿಎಂ ಒಳಗೆ ಹಣ ಕಳವು ಮಾಡಲು ಯತ್ನಿಸುತ್ತಿದ್ದಾಗಲೇ ದಾಳಿ ನಡೆಸಿದರು. ಕಾರ್ಯಾಚರಣೆ ವೇಳೆ ಅವೇಜ್ಖಾನ್ನನ್ನು ಸ್ಥಳದಲ್ಲೇ ಬಂಧಿಸಲಾಯಿತು. ಮತ್ತೋರ್ವ ಆರೋಪಿ ಸುಹೀಲ್ ಪರಾರಿಯಾಗಿದ್ದರೂ, ಪೊಲೀಸರು ತ್ವರಿತ ಶೋಧ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಆತನನ್ನೂ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಪ್ರಕರಣ ಸಂಬಂಧ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕಳವು ಯತ್ನದ ಹಿಂದಿನ ಉದ್ದೇಶ ಹಾಗೂ ಆರೋಪಿಗಳ ಹಿನ್ನೆಲೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ವರದಿ ಎಂ ಡಿ ನಾಸೀರ್ ಅರಸೀಕೆರೆ
ಅರಸೀಕೆರೆಯಲ್ಲಿ ಎಟಿಎಂ ದರೋಡೆ ಯತ್ನ ವಿಫಲ
Leave a Comment