ಮಾಡಾಳು ಅರಸೀಕೆರೆ ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ
ಚಾಲನೆ ದೊರೆತಿದೆ. ಜಾತ್ರಾ ಮಹೋತ್ಸವದ ಮೊದಲ ದಿನವಾದ ಬುಧವಾರ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಶ್ರೀ ಮಠದ ಸಂಪ್ರದಾಯದಂತೆ ಸಾವಿರಾರು ಮುತ್ತೈದೆಯರಿಗೆ ಉಡಿ ತುಂಬಿ, ಮಡಿಲಕ್ಕಿ, ಕುಂಕುಮ ನೀಡಿ, ಬಾಗಿನ ಕೊಟ್ಟು ಸತ್ಕರಿಸಲಾಯಿತು.
ಜಾತಿ, ಮತ, ಪಂಥ ಬೇಧವಿಲ್ಲದೆ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಹೆಂಗೆಳೆಯರು, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಂದ ಸಾಂಪ್ರದಾಯಿಕ ಗೌರವ ಜೊತೆಗೆ ಆಶೀರ್ವಚನ ಪಡೆದು ಸಂಭ್ರಮಿಸಿದರು.
ನಂತರ ಅರಿಶಿನ ಕುಂಕುಮದೊಂದಿಗೆ ಹೂ, ಬಳೆ ಹಾಗೂ ಸೀರೆಯನ್ನು ಹೆಣ್ಣು ಮಕ್ಕಳಿಗೆ ನೀಡುವ ಮೂಲಕ ಶ್ರೀ ಮಠದ ಶ್ರೀಗಳಾದ ಡಾ.ಶಿವಾನಂದ ಶಿವಯೋಗಿ
ರಾಜೇಂದ್ರ ಮಹಾಸ್ವಾಮೀಜಿಗಳು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಹೆಣ್ಣು ಮಕ್ಕಳಿಗೆ ಶ್ರೀಮಠವು ಮೊದಲಿನಿಂದಲೂ ಗೌರವ ನೀಡುತ್ತಾ ಬಂದಿರುವುದಲ್ಲದೆ, ಪೂಜ್ಯ ಭಾವನೆಯಲ್ಲಿ ಕಾಣಲಾಗುತ್ತಿದೆ ಎಂದರು.
ಮಠಕ್ಕೆ ಬರುವ ಪ್ರತಿ ಹೆಣ್ಣು ಮಗಳೂ ಸಹ, ಪಾರ್ವತಿ ಸಮಾನ ಎಂಬುದು ಮಠದ ನಂಬಿಕೆಯಾಗಿದೆ. ಅಲ್ಲದೆ, ಮುತ್ತೈದೆಯರಿಗೆ ಬಾಗಿನ ನೀಡುವ ಮಠದ ಸಂಪ್ರದಾಯ ಒಂದೆಡೆಯಾದರೆ, ಅವರನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಹೆಣ್ಣು ಮಕ್ಕಳನ್ನೂ ಮುನ್ನಲೆಗೆ ತರುವುದು ಹಾಗೂ ಪುರುಷರಿಗೆ ಸಮಾನಳು ಎಂದು ಸಾರುವುದು ಕಾರ್ಯಕ್ರಮದ ಮುಖ್ಯ ಆಶಯ, ಉದ್ದೇಶ ಎಂದು ನುಡಿದರು.
ಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ಮಧ್ಯಾಹ್ನ ಸಾಮೂಹಿಕವಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಗುರುವಾರ ಕೋಡಿಮಠ ಹಾಗೂ ಹಾರನಹಳ್ಳಿ ಗ್ರಾಮಗಳನ್ನು ಪ್ರವೇಶಸುವ ಮಹಾಸ್ವಾಮೀಜಿ ಅವರು, ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುವರು. ಶ್ರೀಗಳನ್ನು ಸ್ವಾಗತ ಮಾಡಲು, ಈಗಾಗಲೇ ಕೋಡಿಮಠ ಮತ್ತು ಹಾರನಹಳ್ಳಿ ಜನರು ರಸ್ತೆ ಮತ್ತಿತರ ಕಡೆಗಳಲ್ಲಿ ತಳಿರು-ತೋರಣಗಳಿಂದ ಸಿಂಗಾರ ಮಾಡಲಾಗಿದೆ. ಶ್ರೀಗಳ ಆಗಮನಕ್ಕೆ ಗ್ರಾಮಸ್ಥರು ಕಾಯುತ್ತಿದ್ದಾರೆ. ರಸ್ತೆಗಳು ಎಲ್ಲಾ ರೀತಿಯಲ್ಲೂ ಸಿಂಗಾರಗೊಂಡಿದ್ದು, ಹಬ್ಬದ ವಾತಾವರಣ ನಿರ್ಮಾಣ ಆಗಿದೆ.
ಈ ವೇಳೆ ಮಾತನಾಡಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ, ನಾಡಿನ ಲಕ್ಷಾಂತರ ಭಕ್ತರಿಗೆ ಕೋಡಿಮಠ ಸನ್ಮಾರ್ಗ ತೋರುತ್ತಿದೆ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ, ಸಾರ್ವಜನಿಕ ಕ್ಷೇತ್ರದಲ್ಲಿ ಶ್ರೀಮಠವು ಸಲ್ಲಿಸುತ್ತಿರುವ ಸೇವೆ ಇತರರಿಗೆ ಆದರ್ಶವಾಗಿದೆ ಎಂದರು.
ಜಾತ್ರಾ ಮಹೋತ್ಸವದ ಮೊದಲನೇ ದಿನ ಸಾವಿರಾರು ಹೆಂಗೆಳೆಯರಿಗೆ ಉಡಿತುಂಬಿ ಬಾಗಿನ ಸಮರ್ಪಿಸುತ್ತಿರುವ ಶ್ರೀ ಕ್ಷೇತ್ರವು, ಮಹಿಳೆಯರಿಗೆ ತೋರುತ್ತಿರುವ ವಿಶೇಷ ಗೌರವಕ್ಕೆ ಸಾಕ್ಷಿಯಾಗಿದೆ. ಹಾಗೆಯೇ ಇದು ಸ್ತ್ರೀ ಸಮುದಾಯಕ್ಕೆ ಸಂದ ಗೌರವ ಎಂದು ಬಣ್ಣಿಸಿದರು. ಮುಂದಿನ ವರ್ಷದಿಂದ ತಾವೂ ಸಹ ಮುತ್ತೈದೆಯರಿಗೆ ಉಡಿತುಂಬುವ ಸೇವಾ ಕಾರ್ಯಕ್ಕೆ ಒಂದು ಸಾವಿರ ಸೀರೆ ಕೊಡಿಸುವುದಾಗಿ ಶಾಸಕರು ಘೋಷಿಸಿದರು.







